Sunday, June 12, 2011


How to impress your love?ನಿಮ್ಮ ಮನದನ್ನೆ(ಹೆಂಡತಿ ಅಂತ ಓದಿಕೊಳ್ಳಿ)ಯನ್ನು ಮೆಚ್ಚಿಸುವುದು ಹೇಗೆ? ಇದು ಯಾವುದೇ ಗಂಡಸಿಗಾಗಲಿ ಮಿಲಿಯನ್ ಡಾಲರ್ ಪ್ರಶ್ನೆ. ಆದರೂ, ಜೀವನರಥ ಸುಗಮವಾಗಿ ಸಾಗುತಿರಬೇಕಾದರೆ ಪ್ರಯತ್ನ ಸತತವಾಗಿ ಸಾಗುತ್ತಿರಲೇಬೇಕು. ಸುಖ ಸಂಸಾರಕ್ಕೆ 12 ಸೂತ್ರಗಳು ಸಾಕಾಗಲಿಕ್ಕಿಲ್ಲವೆಂದು ಮತ್ತು ನಿಮ್ಮ ಸಂಸಾರದಲ್ಲಿಯೂ ಸರಿಗಮವಿರಲೆಂದು ಎರಡು ಡಜನ್ ಸೂತ್ರಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಲ್ಲಿ ಕೆಲವು ನಿಮಗೆ ಕ್ರೇಜಿ ಅನ್ನಿಸಬಹುದು, ಹಲವು ಸೂತ್ರಗಳನ್ನು ನೀವೀಗಾಗಲೆ ಬಳಸಿ ಸೋತಿರಬಹುದು ಅಥವಾ ಗೆದ್ದಿರಬಹುದು. ಕೆಲವು ವರ್ಕ್ ಔಟ್ ಆಗೋದೆ ಇಲ್ಲ ಅನ್ನುವಂಥವೂ ಸಖತ್ ಕೆಲಸ ಮಾಡಬಹುದು. ಹೆಣ್ಣಿನ ಮನಸ್ಸನ್ನು ಬಲ್ಲವರಾರು?

1) ನೀನು ಸುಂದರಿ ಎಂದು ಆಕೆಗೆ ಆಗಾಗ ಹೇಳುತ್ತಿರಿ.2) ದಿನದಲ್ಲಿ ಒಂದು ಕ್ಷಣಕ್ಕಾದರೂ ಆಕೆಯ ಕೈಗಳನ್ನು ಹಿಡಿದುಕೊಳ್ಳಿ.3) ಮುನಿಸಿಕೊಂಡಾಗ ಆಕೆಯನ್ನು ಹಿಂಭಾಗದಿಂದ ಅಪ್ಪಿಕೊಂಡು, ಮುದ್ದಿನಿಂದ ಚುಂಬಿಸಿ.4) ಆಕೆಯ ಧ್ವನಿ ಸಂದೇಶಗಳನ್ನು ಅಲಾರ್‍ಮ್ ಆಗಿ ಇಟ್ಟುಕೊಳ್ಳಿ.5) ಆಕೆ ನಿಮ್ಮೊಂದಿಗಿಲ್ಲದಾಗ ಹೊರಗೆ ಹ್ಯಾಂಗ್ ಔಟ್ ಆಗಲು ಹೋಗಬೇಡಿ. ಆಕೆ ಹರ್ಟ್ ಆಗಬಹುದು.6) ಬರೀ ಹಾಯ್ ಅನ್ನಲೂ ಆಕೆಗೆ ಕರೆ ಮಾಡಿ.7) ನಿಮ್ಮ ಸ್ನೇಹಿತರಿಗೆ ಈಕೆ ನಿಮ್ಮ ಗರ್ಲ್ ಫ್ರೆಂಡ್ ಎಂದು ಪರಿಚಯಿಸಿ.8) ವಿಶ್ರಾಂತಿ ತೆಗೆದುಕೊಳ್ಳುವಾಗ ಆಕೆಯ ತಲೆ ಕೂದಲಿನೊಂದಿಗೆ ಆಟವಾಡಿ.9) ಆಕೆಯನ್ನು ಕಚೇರಿಗೆ ಬಿಡುವುದು, ಕರೆದುಕೊಂಡು ಬರುವುದನ್ನು ರೂಢಿಸಿಕೊಳ್ಳಿ.10) ಸಮಯ ಸಿಕ್ಕಾಗಲೆಲ್ಲ ಜೋಕುಗಳನ್ನು ಸಿಡಿಸಿ ನಗುವಂತೆ ಮಾಡಿ.11) ಆಕೆಗೆ ನಿಮ್ಮ ತೋಳುಗಳಲ್ಲಿ ವಿರಮಿಸುವ ಅವಕಾಶ ಮಾಡಿಕೊಡಿ.12) ಆಕೆಯ ಬಗ್ಗೆ ನೀವೆಷ್ಟು ಕಾಳಜಿ ವಹಿಸುತ್ತೀರ ಎಂಬ ಬಗ್ಗೆ ಆಕೆಗೆ ಮನವರಿಕೆ ಮಾಡಿಕೊಡಿ.13) ಆಕೆಗೆ ಚಿನ್ನದ ಆಭರಣ ಮತ್ತು ಬಟ್ಟೆಯ ಉಡುಗೊರೆ ಸಂದರ್ಭ ಬಂದಾಗಲೆಲ್ಲ ನೀಡುತ್ತಿರಿ.14) ನೀವು ಏಕಾಂಗಿಯಾಗಿರುವಾಗ ಯಾವ ರೀತಿ ವರ್ತಿಸುತ್ತೀರೋ, ನಿಮ್ಮ ಸ್ನೇಹಿತರಿರುವಾಗಲೂ ಅದೇ ರೀತಿ ವರ್ತಿಸಿ.15) ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ.16) ವಾರಾಂತ್ಯದಲ್ಲಿ ತಪ್ಪದೆ ಹೊಟೇಲುಗಳಿಗೆ, ಪಾರ್ಕುಗಳಿಗೆ ಕರೆದೊಯ್ಯಿರಿ. ಇದರಿಂದ ಮುಂದಿನ ಇಡೀ ವಾರಕ್ಕೆ ಆಕೆಗೆ ಚೈತನ್ಯ ದೊರೆಯುತ್ತದೆ.17) ಮಳೆ ಬಂದಾಗ, ಚಳಿ ಇದ್ದಾಗ ಮುಸುಕು ಹೊದ್ದು ಮಲಗಬೇಡಿ. ಇಂಥ ಸಂದರ್ಭದಲ್ಲಿ ಸಾಮೀಪ್ಯ, ಸಾಂಗತ್ಯವೇ ಆಕೆಗೆ ಪುಳಕ ನೀಡುತ್ತದೆ.18) ಒಬ್ಬೊಬ್ಬರೇ ಹಾಡು ಕೇಳುತ್ತ ಮೈಮರೆಯಬೇಡಿ, ಆಕೆಗೂ ಕೇಳಿಸಿ.19) ಆಕೆಯ ಹುಟ್ಟುಹಬ್ಬವನ್ನು ಯಾವತ್ತೂ ನೆನಪಿಟ್ಟುಕೊಂಡಿರಿ ಮತ್ತು ಅಂದು ತಪ್ಪದೇ ಅನಿರೀಕ್ಷಿತ ಉಡುಗೊರೆ ನೀಡಿ ಮತ್ತು ಇಡೀ ದಿನ ಜೊತೆಯಾಗಿರಿ.20) ಆಕೆ ಗಿಫ್ಟ್ ನೀಡಿದಾಗ, ಇಷ್ಟವಾಗದಿದ್ದರೂ ತೋರ್ಪಡಿಸಿಕೊಳ್ಳಬೇಡಿ.21) ಆಕೆಯ ಆಸಕ್ತಿಕರ ವಿಷಯಗಳ ಬಗ್ಗೆ ನೀವೂ ಆಸಕ್ತಿ ಬೆಳೆಸಿಕೊಳ್ಳಿ.22) ನಿಮ್ಮಿಬ್ಬರ ನಡುವಿನ ಪ್ರತೀ ಸಣ್ಣ ವಿಷಯವನ್ನೂ ಜ್ಞಾಪಕದಲ್ಲಿಟ್ಟುಕೊಳ್ಳಿ.23) ಯಾವುದೇ ಕಾರಣಕ್ಕೂ ಆಕೆಯ ಗೆಳತಿಯರನ್ನು ಆಕೆಯೆದುರು ಹೊಗಳಬೇಡಿ.24) ಅಪ್ಪಿತಪ್ಪಿಯೂ ತವರು ಮನೆಯವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ.
How to win a girl's heartಮೆಚ್ಚಿನ ಹುಡುಗಿಯ ಹೃದಯ ಕದಿಯುವುದು ಕೆಲ ಹುಡುಗರಿಗೆ ಕರತಲಾಮಲಕ. ಹುಡುಗರಲ್ಲಿನ ಇನ್ ಬಿಲ್ಟ್ ಆಕರ್ಷಣೆಯಿಂದಲೋ ಅಥವಾ ಹುಡುಗಿಯರಲ್ಲಿನ ಇನ್ ಬಿಲ್ಟ್ ಮೂರ್ಖತನದಿಂದಲೋ ಕಿಂಚಿತ್ ಪ್ರಯತ್ನವೂ ಇಲ್ಲದೆ ನಿರಾಯಾಸವಾಗಿ ಪ್ರೇಮದ ಬಲೆಯಲ್ಲಿ ಬಿದ್ದಿರುತ್ತಾರೆ. ಇನ್ನು ಕೆಲವರು 'ಕಾಂತೆ, ನಿನಗಾಗಿ ಪ್ರಾಣ ಬಿಡಲೂ ತಯಾರು' ಅಂದರೂ ಮಲ್ಲಿಗೆ ಎಸಳಿನ ಮನಸಿನ ಹುಡುಗಿ ಕ್ಯಾರೆ ಅಂದಿರುವುದಿಲ್ಲ. ಹಿಂದಿನ ಕಾಲದಲ್ಲಾಗಿದ್ದರೆ ನೆರಿಗೆ ಲಂಗದ ಹುಡುಗಿಯತ್ತ ಒಂದು ವಾರೆನೋಟ ಬೀರಿದ್ದರೂ ಸಾಕಿತ್ತು, ಹೊಸಹೊಸ ಭಾವ ತುಂಬಿ, ನಸುನಗೆ ಚಿಮ್ಮಿ ಮರುಳಾಗಿಬಿಡುತ್ತಿದ್ದರು. ಆದರೆ, ಕಾಲೇಜು ಮೆಟ್ಟಿಲೇರಿದಾಕ್ಷಣ ಟಿಶರ್ಟು ಮತ್ತು ಜೀನ್ಸ್ ಏರಿಸಿಕೊಂಡು ಎದೆಯುಬ್ಬಿಸಿಕೊಂಡು ನಡೆಯುವ ಹುಡುಗಿಯರ ಮೇಲೆ ಮನ್ಮಥ ಬಾಣ ಬಿಡುವುದು ಅಷ್ಟು ಸುಲಭವಾದ ಮಾತಲ್ಲ. ಆದರೆ, ಹುಡುಗರು ಮಾತ್ರ ನಿರಾಶರಾಗುವ ಕಾರಣವಿಲ್ಲ. ಕೆಳಗೆ ತಿಳಿಸಿರುವ ಕೆಲ ಅಂಶಗಳತ್ತ ಗಮನಹರಿಸಿದರೆ ಮನದನ್ನೆಯನ್ನು ಮರುಳು ಮಾಡುವಲ್ಲಿ ಹುಡುಗರು ಹಿಂದೆ ಬೀಳಲಾರರು. ಇವನ್ನೆಲ್ಲ ಮಾಡಿಯೂ ಹುಡುಗಿಯನ್ನು ಆಕರ್ಷಿಸುವಲ್ಲಿ ಸೋತರೆ ದೇವದಾಸ್ ಆಗುವ ಅಥವಾ ಬದುಕೇ ಮುಗಿಯಿತು ಎಂದುಕೊಳ್ಳುವ ಅಗತ್ಯವೂ ಇಲ್ಲ.1) ಕಣ್ಣಲ್ಲಿ ಕಣ್ಣು : ಅವಳ ಕಣ್ಣಲ್ಲಿ ನಿಮ್ಮ ಬಿಂಬ ಬಿದ್ದರೆ ಓಕೆ. ಆದರೆ, ಕಣ್ಣು ಕಣ್ಣು ಒಂದಾಗುವ ಕ್ಷಣದಲ್ಲಿ, ಆಕೆ ತನ್ನ ತಾಯಿಯ ಬಗ್ಗೆಯೇ ಮೈಮರೆತು ಹೇಳುವ ಹೊತ್ತಿನಲ್ಲಿ ನಿಮ್ಮ ದೃಷ್ಟಿ ಆಕೆ ವಕ್ಷಸ್ಥಳದಲ್ಲಿ ಬಿದ್ದಿದ್ದು ಆಕೆಗೇನಾದರೂ ಗೊತ್ತಾದರೆ, ಡೋಂಟ್ ಬಿ ಸಾರಿ.2) ಸ್ಮಾರ್ಟ್ ಆಗಿ ಕಾಣಿರಿ : ಸ್ಮಾರ್ಟ್ ಆಗಿ ಕಾಣಬೇಕೆಂದರೆ ನೀಟಾಗಿ ಶೇವ್ ಮಾಡಿರಬೇಕು, ನೀಟಾಗಿ ಬಾಚಿರಬೇಕು, ನೀಟಾಗಿ ಮೀಸೆ ಕತ್ತರಿಸಿರಬೇಕು ಎಂದೇನಾದರೂ ನೀವು ಎಣಿಸಿದ್ದರೆ, ನಿಮ್ಮ ಎಣಿಕೆ ತಪ್ಪು. ಕುರುಚಲು ಗಡ್ಡ ಬಿಟ್ಟ, ಬೆವರಿನ ವಾಸನೆ ಬರದಂತೆ ಶಿಸ್ತಾಗಿ ಡ್ರೆಸ್ ಮಾಡಿಕೊಂಡಿರುವ ಹುಡುಗರನ್ನು ಹುಡುಗಿಯರು ಮೆಚ್ಚುತ್ತಾರೆ.3) ಉತ್ತಮ ಗೆಳೆಯರ ಬಳಗ : ನೀವೆಷ್ಟು ಡಿಸೆಂಟಾಗಿರ್ತೀರೋ ನಿಮ್ಮ ಸುತ್ತಲಿನ ಗೆಳೆಯರ ಬಳಗವೂ ಅಷ್ಟೇ ಒಳ್ಳೆಯ ನಡತೆಯವರಾಗಿರಬೇಕು ಅಂತ ಹುಡುಗಿಯರು ಬಯಸುತ್ತಾರೆ ಎಂಬುದು ನೆನಪಿರಲಿ. ಆದರೆ, ಆ ಗೆಳೆಯರ ಬಳಗದಲ್ಲಿ ಬೇರೆಯವನ ಪ್ರೇಮದ ಬಲೆಗೆ ಬೀಳದಂತೆ ಎಚ್ಚರವಹಿಸಿ ಅಷ್ಟೆ.4) ಮೊಬೈಲಲ್ಲಿ ಇಣುಕಬೇಡಿ : ಹುಡುಗಿಯ ಫೋನಿಗೆ ಎಸ್ಎಮ್ಎಸ್ ಬಂದಾಗಲಾಗಲಿ, ಕರೆ ಬಂದಾಗಲಾಗಲಿ ಇಣುಕಿ ನೋಡುವ ದುರಭ್ಯಾಸ ಬೆಳೆಸಿಕೊಳ್ಳಬೇಡಿ. ಹಾಗೆಯೆ, ನಿಮಗೆ ಕರೆ ಬಂದಾಗಲೂ ಆಫ್ ಮಾಡಿರಿ ಅಥವಾ ನಂತರ ಮಾಡುತ್ತೇನೆಂದು ಕಟ್ ಮಾಡಿರಿ. ನಿಮ್ಮ ಗಮನವೇನಿದ್ದರೂ ಆಕೆಯ ಮೇಲಿರಬೇಕು.5) ಎಡವಟ್ಟು ಪ್ರಶ್ನೆ ಕೇಳಬೇಡಿ : ಆಕೆ ತನ್ನ ಮನೆಯವರ ಬಗ್ಗೆ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುತ್ತಿರುವಾಗ ಪೂರಕ ಪ್ರಶ್ನೆ ಕೇಳಿ. ಎಡವಟ್ಟು ಪ್ರಶ್ನೆಗಳನ್ನು ಕೇಳಿ ಇರುಸುಮುರುಸು ಮಾಡಿ ದಕ್ಕಿರುವ ಸುವರ್ಣ ಅವಕಾಶವನ್ನು ಹಾಳುಮಾಡಿಕೊಳ್ಳಬೇಡಿ. ಅವಳ ಬಗ್ಗೆ ಆಸಕ್ತಿಯಿದೆ ಎಂದು ತೋರಿಸಿಕೊಳ್ಳಿ.6) ಹೊಗಳಿರಿ, ಅಟ್ಟಕ್ಕೇರಿಸಬೇಡಿ : ಹೊಗಳುವುದನ್ನು ಹುಡುಗಿಯರು ಇಷ್ಟಪಡುತ್ತಾರೆಂಬುದು ಎಲ್ಲರಿಗೂ ತಿಳಿದ ಸತ್ಯ. ಆಕೆ ಧರಿಸಿರುವ ಡ್ರೆಸ್, ಆಕೆಯಲ್ಲಿರುವ ಉತ್ತಮ ಗುಣ, ಅಂದ ಚೆಂದವನ್ನು ಮಂದವಾಗಿಯೇ ಹೊಗಳಿರಿ. ಆದರೆ, ಸಿಕ್ಕಾಪಟ್ಟೆ ಹೊಗಳಿ ಅಟ್ಟಕ್ಕೇರಿಸಬೇಡಿ. ಅತಿಯಾದ ಹೊಗಳಿಕೆ ಕೆಲವರು ಇಷ್ಟಪಡಲಿಕ್ಕಿಲ್ಲ.7) ಸಲಹೆ ಕೇಳಿ : ನಮ್ಮನ್ನು ನಾವು ಬೃಹಸ್ಪತಿಗಳೆಂದು ಅಂದುಕೊಂಡಿದ್ದರೂ ಅದನ್ನು ಆಕೆಯ ಎದುರಿಗೆ ಪ್ರದರ್ಶಿಸುವುದು ಜಾಣತನವಲ್ಲ. ಗೊತ್ತಿಲ್ಲದಂತೆ ನಟಿಸುವುದು, ಆಕೆಯ ಸಲಹೆ ಕೇಳುವುದು ಕೂಡ ಜಾಣತನದ ಲಕ್ಷಣ

ನೂರೆಂಟು ಕಾಮನೆಗಳನ್ನು ಕೆರಳಿಸುವ ಬಣ್ಣ

Colors in romanceಪ್ರೀತಿ ಕುರುಡು ಅಂತಾರೆ ಹೌದಾ? ನಿಜ, ಪ್ರೀತಿ ಜಾತಿ, ಭಾಷೆ, ಗಡಿ, ಬಣ್ಣ ಎಲ್ಲವನ್ನೂ ಮೀರಿದ್ದು. ಪ್ರೀತಿಯೆಂಬ ಹೊಂಡದಲ್ಲಿ ಬಿದ್ದವರ ಮನದಲ್ಲಿ ಇದಾವುದೂ ಇರುವುದಿಲ್ಲ. ಎಲ್ಲ ಮಿತಿಗಳನ್ನು ಮೀರಿ ದಡ ಸೇರುವುದೊಂದೇ ಅವರ ಧ್ಯೇಯವಾಗಿರುತ್ತದೆ. ಆದರೆ, ಪ್ರೀತಿಯ ಮೋಹಕ್ಕೆ ಒಳಗಾಗುವ ಮುನ್ನ ಬಣ್ಣ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸಿರುತ್ತದೆ."ನನ್ನ ಹುಡುಗಿ ತೊಟ್ಟ ಕೆಂಬಣ್ಣದ ಸೆಲ್ವಾರ್ ಕಮೀಜಿನ ಆಕರ್ಷಣೆಗೆ ಒಳಗಾಗಿಯೇ ಆಕೆಯನ್ನು ಪ್ರೀತಿಸಲು ಪ್ರಾರಂಭಿಸಿದೆ. ಎಷ್ಟು ಚೆನ್ನಾಗಿ ಕಾಣ್ತಾಳೆ ಗೊತ್ತಾ ಆ ಬಣ್ಣದ ಉಡುಪು ತೊಟ್ಟಾಗ" ಅಂತ ಹುಡುಗ ತನ್ನ ಪ್ರೀತಿಯ ಬಗ್ಗೆ ಕೊಚ್ಚಿಕೊಂಡಾಗ ಪಕ್ಕದಲ್ಲಿದ್ದವರಿಗೆ ಅಸೂಯೆಯಾಗದೆ ಇರದು. ಇತರ ಕಣ್ಣುಗಳೂ ಅಂತಹ ಬಣ್ಣದ ಹುಡುಕಾಟದಲ್ಲಿ ತೊಡಗಲು ಪ್ರಾರಂಭಿಸಿರುತ್ತವೆ.ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ... ಹಾಡು ಬಣ್ಣದ ವರ್ಣನೆಯಿಂದಲೇ ಅನೇಕ ಪ್ರೇಮಿಗಳಲ್ಲಿ ಪ್ರೀತಿಯ ಬಣ್ಣ ಹಚ್ಚಿದ್ದು ಸುಳ್ಳಲ್ಲ. ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ಎಂದು ಪ್ರಿಯತಮೆಯ ಮುಂದು ಉಲಿದು ನೋಡಿ, ಆಕೆ ಪ್ರೇಮದ ಬಲೆಗೆ ಬೀಳದಿದ್ದರೆ ಕೇಳಿ. ಪ್ರೇಮದ ಬಲೆಗೆ ಬಿದ್ದು, ಮದುವೆಯಾಗಿ, ಮಧುಚಂದ್ರ ಮುಗಿದು, ಪ್ರತಿಬಾರಿ ಶಯನಗೃಹಕ್ಕೆ ಕಾಲಿಟ್ಟಾಗ ಆಕರ್ಷಣೆಗೆ ಒಳಗಾಗುವುದು ಈ ಬಣ್ಣವೆ. ಗೋಡೆ ಬಣ್ಣ, ಕಿಟಕಿ ಸ್ಕ್ರೀನ್ ಬಣ್ಣ, ಹಾಸಿಗೆಯ ಹೊದಿಕೆಯ ಬಣ್ಣ... ಕೊನೆಗೆ ಮಲಗಲು ಸಜ್ಜಾಗಿ ನಿಂತ ಬಾಳ ಸಂಗಾತಿ ತೊಟ್ಟ ಉಡುಪಿನ ಬಣ್ಣ...ಆ ಒಂದೊಂದು ಬಣ್ಣದಲ್ಲಿಯೂ ಒಂದೊಂದು ಬಗೆಯ ಆಕರ್ಷಣೆಯಿರುತ್ತದೆ, ವಿಭಿನ್ನ ಭಾವನೆಗಳನ್ನು ಕೆರಳಿಸುತ್ತವೆ, ಪ್ರೇಮದ ನರಳಾಟಕ್ಕೆ ಇಂಬು ನೀಡುತ್ತವೆ. ಮೊದಲನೆ ನೋಟಕೆ ನಿನ್ನ ಮೇಲೆ ನನಗೆ ಮನಸಾಯ್ತು, ಮನಸಾಗಿ ಲವ್ವಾಯ್ತು... ಅಂತ ಲಘುವಾಗಿ ಹಿನ್ನೆಲೆಯಲ್ಲಿ ಹಾಡು ಕೇಳಿಬರುತ್ತಿದ್ದರೆ ದೇಹ ತೂಗುಯ್ಯಾಲೆಯಂತಾಗಿರುತ್ತದೆ, ಮನವು ಕೆರಳಿರುತ್ತದೆ. ಯಾವ ಬಣ್ಣ ಎಂಥ ಭಾವನೆ ಕೆರಳುತ್ತದೆ ಎಂಬುದನ್ನು ನೋಡೋಣ, ಬನ್ನಿ.1. ಕೆಂಪು : ಕೆಂಪು ಪ್ರೇಮದ ಸಂಕೇತ. ಪ್ರಥಮ ಆಕರ್ಷಣೆಯ ಬೀಜ ಬಿತ್ತುವುದೇ ಕೆಂಪು. ಗುಂಪು ಎಷ್ಟೇ ದಟ್ಟವಾಗಿದ್ದರೂ ಎದ್ದು ಕಾಣುವುದು ಕೆಂಬಣ್ಣವೆ. ಕೆಂಪು ವಿಶೇಷವಾದ ಭಾವನೆಯನ್ನು ಚಿಮ್ಮಿಸುತ್ತದೆ. ನೋಡಿದ ಕೂಡಲೇ ಮರುಳಾಗುವಂದೆ ಮಾಡುತ್ತದೆ. ಕೆಂಪು ನೈಟಿ, ಕೆಂಪು ಒಳ ಉಡುಪುಗಳು... ಇನಿಯನನ್ನು ಸನಿಹಕೆ ಸೆಳೆಯಲು ಇನ್ನೇನು ಬೇಕು?2. ಗುಲಾಬಿ : ಈ ಬಣ್ಣ ಪ್ರೇಮೋನ್ಮಾದದ ಸಂಕೇತ. ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ ಗುಲಾಬಿಗೆ ಗುಲಾಬಿಯೇ ಸಾಟಿ. ಪ್ರೇಮಿಗಳ ದಿನದಂದು ಗುಲಾಬಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುತ್ತದೆ. ಕೆಂಪು ಹೆಚ್ಚು ಆಕರ್ಷಿಸಿದರೆ, ಗುಲಾಬಿ ಹಿತವಾಗಿ ನಶೆಯೇರಿಸಿ ಬಿಲ್ಲನ್ನು ಹದೆಯೇರಿಸಿ ಝೇಂಕಾರ ಮಾಡಿಬಿಡುತ್ತದೆ. ಗುಲಾಬಿ ಬಣ್ಣ ತೊಟ್ಟ ಪ್ರಿಯತಮೆಯ ಚೆಲುವು ಎಂದಿಗಿಂತಲೂ ಹೆಚ್ಚಾಗಿರುತ್ತದೆ.3. ನೇರಳೆ : ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ... ಈ ಬಣ್ಣವನ್ನು ಬಣ್ಣಿಸಲಿಕ್ಕಾಗಿಯೇ ಹುಟ್ಟಿದಂತಹ ಹಾಡಿರಬಹುದು. ಹೌದು, ನೇರಳೆ ಬಣ್ಣ ವಿಭಿನ್ನ ಭಾವನೆಗಳನ್ನು ಪುಟಿದೇಳಿಸುತ್ತದೆ, ವಿಚಿತ್ರ ಕಾಮನೆಗಳನ್ನು ಕೆರಳಿಸುತ್ತದೆ. ಹೇಳಲೂ ಆಗಲು, ತಾಳಲೂ ಆಗಲು ಅನ್ನುವಂತ ಮನಸ್ಥಿತಿ. ಈ ಬಣ್ಣದ ಉಡುಪು ತೊಟ್ಟಾಗ ತುಂಟತನ ತಾನೇ ತಾನಾಗಿರುತ್ತದೆ ಮತ್ತು ಅದ್ಭುತ ಪ್ರೇಮದಾಟಕ್ಕೆ ಮೂಡನ್ನು ತಾನಾಗಿಯೇ ಸೃಷ್ಟಿಸುತ್ತದೆ.4. ಬೆಳ್ಳಿ : ಬೆಳ್ಳಿಯ ಹೊಳಪನ್ನು ಮೀರಿಸುವ ಇನ್ನೊಂದು ಬಣ್ಣವೇ ಇಲ್ಲ. ಚುಂಬಕದಂತೆ ಸೆಳೆಯುವ ಶಕ್ತಿ ಬೆಳ್ಳಿ ಬಣ್ಣದಲ್ಲಡಗಿದೆ. ಈ ಬಣ್ಣದ ಸೀರೆಯನ್ನೋ, ನೈಟಿಯನ್ನೋ ತೊಟ್ಟಾಗ ಗುಂಡು ತನಗೆ ಅರಿವಿಲ್ಲದಂತೆಯೇ ಸೆಳೆತಕ್ಕೆ ಒಳಗಾಗಿಬಿಡುತ್ತಾನೆ. ಕ್ಷಣಕಾಲ ತಾನೇನು ಮಾಡುತ್ತಿದ್ದೇನೆ ಎಂಬ ಅರಿವನ್ನೂ ಮರೆಸಿ ಮಂಚಕ್ಕೆ ಸೆಳೆಯುವ ಶಕ್ತಿ ಈ ಬಣ್ಣಕ್ಕಿದೆ.5. ಕಪ್ಪು : ಪ್ರಿಯಕರನಲ್ಲಿ ಪ್ರೇಮದ ಹುಚ್ಚು ಉನ್ಮಾದ ಉಕ್ಕಿಸಬೇಕಿದ್ದರೆ ಕಪ್ಪು ಬಣ್ಣಕ್ಕಿಂತ ಇನ್ನೊಂದು ಬಣ್ಣವೇ ಇಲ್ಲ. ಹೊಂಬಣ್ಣದ ಮೈಸಿರಿಯಿರುವ ಮಹಿಳೆ ಆಕರ್ಷಕವಾಗಿ ಮೈಗೊಪ್ಪುವ ಕಪ್ಪು ಬಣ್ಣದ ಒಳಉಡುಪಾಗಲಿ, ಮೇಲುಡುಪಾಗಲಿ ತೊಟ್ಟರೆ ಅವರಿಲ್ಲಯೇ ಒಂದು ಬಗೆಯ ಪರಿಪೂರ್ಣತೆ ತಂದುಕೊಡುತ್ತದೆ. ಆಮೇಲೆ ಮುಂದಿನ ಕೆಲಸವೆಲ್ಲ ಸರಾಗ.

ಧೂಮಲೀಲೆ ತಡೆಗೆ ಮನೆಮದ್ದು

Ayurveda home medicine helps quit smoking.
ಸಿಗರೇಟು ಬೀಡಿ ಸೇದುವುದನ್ನು ಬಿಡಿ ಎಂದು ಚಟ ಅಂಟಿಸಿಕೊಂಡವರಿಗೆ ತಿಳಿಯಹೇಳುವುದು ಕಷ್ಟಸಾಧ್ಯ. ಬುದ್ದಿ ಹೇಳಿದರೆ ಕೆಲವೊಮ್ಮೆ ಮಹಾಪರಾಧವೇ ಆಗುತ್ತದೆ!ಯಾಕೆಂದರೆ, ತಂಬಾಕು ಬುದ್ದಿ ಹೇಳುವವರಿಗಿಂತ ಹೆಚ್ಚು ಬುದ್ದಿವಂತ. ಧೂಮಪಾನದ ಚಟ ದೆವ್ವ ಹಿಡಿದಹಾಗೆ. ಮಾವು ಬೇವು ನಿಂಬೆ ಸೊಪ್ಪಿಗೆ ಅದು ಬೆದರುವುದಿಲ್ಲ. ತಾನೇ ತಾನಾಗಿ ಕಾಲಿಗೆ ಬುದ್ದಿಹೇಳಿ ಹೋಗುವವವರೆಗೂ ಚಟ ಬೆಳೆಸಿಕೊಂಡವರ ಬೆನ್ನು ಹತ್ತಿದ ಬೇತಾಳನಾಗಿ ಕಾಟಕೊಡುವುದು ಶತಸ್ಸಿದ್ಧ. ಆದರೂ ಸಹ ಧೂಮಪಾನ ಚಟವನ್ನು ಹೋಗಲಾಡಿಸಲು ಮಾರ್ಗೋಪಾಯಗಳು ಹಲವಾರಿವೆ. ಮೊದಲನೆಯದು ಆತ್ಮ ಬಲ ಅಂದರೆ ವಿಲ್ ಪವರ್, ಎರಡನೆಯದು ಔಷಧ. ಆಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ಎಲ್ಲ ವೈದ್ಯಕೀಯ ಪದ್ದತಿಗಳಲ್ಲೂ ಧೂಮಪಾನ ತ್ಯಜಿಸುವುದಕ್ಕೆ ಔಷಧಗಳಿವೆ. ಔಷಧವನ್ನು ಸೇವಿಸಲು ಮನಸ್ಸಿರಬೇಕು, ಅದೇ ಮೊದಲ ಮದ್ದು. ಇವತ್ತು ಅಂದರೆ ಜುಲೈ 13ರ ಸೋಮವಾರ ಬೆಳಗ್ಗೆ 10 ಗಂಟೆಗೆ ಜೀ ಕನ್ನಡ ಚಾನೆಲ್ಲಿನಲ್ಲಿ ಒಂದು ಆರೋಗ್ಯ ಅಂಕಣ ಪ್ರಸಾರವಾಯಿತು. ಕಾರ್ಯಕ್ರಮದ ಇವತ್ತಿನ ವಿಶೇಷ - ಧೂಮಪಾನ ಚಟ ನಿವಾರಣೆಗೆ ಮನೆ ಮದ್ದು. ಡಾ. ಆದರ್ಶ ಎಂಬುವವರು ಅವರು ಹೇಳಿದ ಔಷಧ ರೆಸಿಪಿ ವಿವರಗಳನ್ನು ನಾನು ಬರೆದುಕೊಂಡೆ. ಅದು ಹೀಗಿವೆ. ಧೂಮಪಾನ ಮಾಡುವವರು ಸ್ವತಃ ಪ್ರಯೋಗ ಮಾಡಬಹುದು. ಅಥವಾ, 
ಅವರ ಪರವಾಗಿ ರೋಗಿಗೆ ಅತ್ಯಂತ ಬೇಕಾದವರು ಅಂದರೆ, ಹೆಂಡತಿ, ಅಕ್ಕ, ತಂಗಿ, ಸ್ನೇಹಿತರು ಯಾರಾದರೂ ತಯಾರಿಸಬಹುದು.

ಬೇಕಾಗುವ ಪದಾರ್ಥ :
2-3 ಹಿಪ್ಪಲಿ ತುಂಡುಗಳು
1/4 ಚಮಚ ಗಸಗಸೆ
1/4 ಕಲ್ಲು ಸಕ್ಕರೆ 
1/2 ಚಮಚ ಟೀಪುಡಿ

ಮಾಡುವ ವಿಧಾನ: ಒಲೆಯ ಮೇಲಿನ ಪಾತ್ರೆಯಲ್ಲಿ ಗಸಗಸೆ ಮತ್ತು ಹಿಪ್ಪಲಿಯನ್ನು ಬಾಕಿ ಸ್ವಲ್ಪ ಬೆಚ್ಚಗೆ ಮಾಡಬೇಕು. ಆನಂತರ ಒಂದು ಲೋಟ ನೀರು ಹಾಕಿ ಕುದಿಸಬೇಕು. ಕುದಿಯುವ ನೀರಿಗೆ ಕಲ್ಲುಸಕ್ಕರೆ ಮತ್ತು ಟೀ ಪುಡಿ ಹಾಕಿ ಮತ್ತಷ್ಟು ಕುದಿಸಬೇಕು. ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಬೇಕು. ಈ ಕಷಾಯವನ್ನು ಸೋಸಿ ಆನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ ಹಿಂಡಬೇಕು. ಈ ಕಷಾಯವನ್ನು ಬೆಳಗ್ಗೆ ಮಾಡಿ ಕುಡಿದ ಪಕ್ಷದಲ್ಲಿ ಸಿಗರೇಟು ಬೀಡಿ ಸೇದುವುದಕ್ಕೆ ಸಾಧ್ಯವೇ ಇಲ್ಲ. ತಂಬಾಕಿನ ವಾಸನೆ ಬಂದಾಕ್ಷಣ ವಾಕರಿಕೆ ಬಂದು ಸಿಗರೇಟು ಸೇದುವ ಆಸೆ ಕಮರಿಹೋಗುತ್ತದೆ. ಎಷ್ಟೋ ಮಂದಿ ಧೂಮಪಾನ ಚಟಕ್ಕೆ ಬಲಿಯಾಗಿ ಸೇದಲಾರದೆ ಬಿಡಲಾರದೆ ನರಳುತ್ತಿರುತ್ತಾರೆ. ಅಂಥವರು ಗಟ್ಟಿ ಮನಸ್ಸು ಮಾಡಿ ಈ ಔಷಧ ಮಾಡಿ ಕುಡಿದು ಧೂಮಪಾನ ಚಟಕ್ಕೆ ಗುಡ್ ಬೈ ಹೇಳಬಹುದು. ಶ್ವಾಸಕೋಸದ ಅರ್ಬುದ ರೋಗ ಹತ್ತಿರ ಸುಳಿಯದಂತೆ ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು
.

Monday, April 18, 2011

ಲೈಂಗಿಕತೆ ನಂಬಿಕೆಗಳು ಎಷ್ಟು ನಿಜ? ಎಷ್ಟು ಸುಳ್ಳು?

ಪ್ರೌಢಾವಸ್ಥೆಗೆ ಬಂದ ಯುವಕರ ಲೈಂಗಿಕಾಸಕ್ತಿ ಹಾಗೂ ಚಟಗಳು ಪರಸ್ಪರ ಕೈ ಕೈ ಹಿಡಿದು ಜೊತೆಜೊತೆಗೆ ಸಾಗುತ್ತವೆ. ಕುಂತರೂ, ನಿಂತರೂ, ನಡೆದಾಡುವಾಗಲೂ ಎಲ್ಲಾ ಸಮಯದಲ್ಲೂ ಸೆಕ್ಸ್ ಅನ್ನುವ ವೈರಸ್ ಅನ್ನು ತಲೆಯಲ್ಲಿ ತುಂಬಿಕೊಂಡರೆ ಕೊಂಚ ಅಸಹಜ ಹಾಗೂ ಮುಜುಗರ ಎನಿಸುತ್ತದೆ. 

ಪುರುಷರಿಗೆ ಸದಾ ಅದೇ ಚಿಂತೆ ಎಂದು ನಿಮ್ಮ ಸಂಗಾತಿಗೆ ಬೇಸರ ತರಿಸಬಹುದು. ಮಾನಸಿಕವಾಗಿ ಆಕೆ ತತ್ತರಿಸುವಷ್ಟು ನಿಮ್ಮ ಉತ್ಕಟತೆ ನಿಮಗರಿವಿಲ್ಲದ್ದಂತೆ ಬೆಳೆದುಬಿಡುತ್ತದೆ. ನಿತ್ಯದ ಅಭ್ಯಾಸ ದಿನಕಳೆದಂತೆ ಚಟವಾಗಿ ಬಿಡುತ್ತದೆ. ಈ ರೀತಿ ಪುರುಷರ ಲೈಂಗಿಕಾವಸ್ಥೆಯ ನಂಬಿಕೆ, ಅಪನಂಬಿಕೆ, ಅಭ್ಯಾಸಗಳತ್ತ ಇಣುಕು ನೋಟ ಇಲ್ಲಿದೆ. ಇಲ್ಲಿರುವ ಸಂಗತಿಗಳು ಅಮೆರಿಕದ ವೈದ್ಯರೊಬ್ಬರ ಸಂಶೋಧನೆಯ ವರದಿಯಾದರೂ ಗಂಡಸರು ಎಲ್ಲೆಡೆ ಇದ್ದರೂ ಆ ವಿಷಯದಲ್ಲಿ ಎಲ್ಲರೂ ಒಂದೇ.

*ವಿವಾಹಿತರು vs ಅವಿವಾಹಿತರು : ವಿವಾಹಿತರಿಗೆ ಹೋಲಿಸಿದರೆ ಅವಿವಾಹಿತ ಪುರುಷರು ಉತ್ತಮ ಲೈಂಗಿಕ ಸುಖ ಅನುಭವಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ, ಸತ್ಯಕ್ಕೆ ದೂರವಾದ ಮಾತು. ಮದುವೆಯಾದ ಪುರುಷರಿಗೆ ಹೆಚ್ಚಿನ ಆತ್ಮವಿಶ್ವಾಸದಿಂದ ಸಂಗಾತಿಯೊಡನೆ ಬೆರೆತು ಸಂಭೋಗ ಸುಖ ಅನುಭವಿಸುವ ಅವಕಾಶವಿರುತ್ತದೆ ಎನ್ನುತ್ತದೆ ಸಮೀಕ್ಷೆ. 

* ಪುರುಷರು ಹಾಗೂ ಲೈಂಗಿಕ ಕ್ರಿಯೆ: ಸಮೀಕ್ಷೆ ಪ್ರಕಾರ ಪುರುಷರು ಹಾಗೂ ಲೈಂಗಿಕಾಸಕ್ತಿ ಬಗ್ಗೆ ಕೆಲ ಮಹಿಳೆಯರು ಹೇಳುವುದು ಹೀಗೆ: ನಮ್ಮವರಿಗೆ ಒಂದು ರಾತ್ರಿ ಕೂಡಾ ಕಾಮನೆಗಳನ್ನು ಅದುಮಿಡಲು ಆಗುವುದಿಲ್ಲ. ಇದು ಒಂದು ರೀತಿ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯ. ನೆಚ್ಚಿನ ಸಂಗಾತಿ ಜೊತೆಗಿರುವಾಗ ಅಥವಾ ಆಕೆಯ ಬಗ್ಗೆ ಮನಸ್ಸು ಹರಿದ ಪ್ರತಿ 7 ಸೆಕೆಂಡಿಗೊಮ್ಮೆ ಆಕೆಯೊಡನೆ ಕಾಮಕೇಳಿ ಆಡುವ ಕನಸು ಪುರುಷರ ಮನದಲ್ಲಿ ಸುಳಿಯುತ್ತದಂತೆ. ಆದರೆ, ಪುರುಷರ ಈ ಅಸಹಜ ಉತ್ಕುಟತೆಯಿಂದ ಸಂಸಾರ ಸಾಂಗತ್ಯದಲ್ಲಿ ಬಿರುಕು ಮೂಡಬಹುದು. ಎಲ್ಲವೂ ದೈಹಿಕವಾಗಿ ಬಿಟ್ಟರೆ ಪ್ರೀತಿ ಪ್ರೇಮಕ್ಕೆ ಅರ್ಥವಿರುವುದಿಲ್ಲ ಎಂಬುದು ಪುರುಷರಿಗೆ ಸ್ವಲ್ಪ ನೆನಪಿದ್ದರೆ ಒಳಿತು. 

* ಪುರುಷರು ಹಾಗೂ ಜನನಾಂಗ: ಲೈಂಗಿಕ ಶಿಕ್ಷಣದ ಕೊರತೆ, ಅರ್ಧಂಬರ್ಧ ತಿಳಿದ ಅಜ್ಞಾನಿಗಳ ಮಾತುಗಳು ಎಷ್ಟೋ ಪುರುಷರ ಜೀವನ ಹಾಳುಗೆಡಸಿಬಿಡುತ್ತದೆ. ಹಿರಿದಾದ ಬಲಿಷ್ಠವಾದ ಶಿಶ್ನ ಇದ್ದರೆ ಮಾತ್ರ ಉತ್ತಮ ಲೈಂಗಿಕ ಆನಂದ ಹೊಂದಳು ಸಾಧ್ಯ ಎಂಬ ಬಲವಾದ ನಂಬಿಕೆಯಲ್ಲಿ ಅರ್ಥವಿಲ್ಲ. ಇಂಚುಗಳ ಲೆಕ್ಕ, ಉದ್ರೇಕಗೊಂಡ ಜನನಾಂಗ ಪಾದಕ್ಕೆ ಸಮಾನಂತರವಾಗಿ ಹೊಂದಬೇಕು, ಇಷ್ಟು ಗಾತ್ರವಿದ್ದರೆ ಮಾತ್ರ ಕಾಮಕ್ರೀಡೆಯಲ್ಲಿ ಜಯ ಎಂಬ ಆಧಾರ ರಹಿತ ಮಾಹಿತಿಯನ್ನು ತಲೆಯಲ್ಲಿ ತುಂಬಿಕೊಳ್ಳುವುದನ್ನು ಬಿಟ್ಟುಬಿಡಿ. ಜನನಾಂಗ ಹಿಗ್ಗುವಿಕೆಯಿಂದ ಮಾತ್ರ ಕಾಮ ತೃಪ್ತಿ ಸಾಧ್ಯ ಎಂಬ ನಂಬಿಕೆ ಇನ್ನೂ ಹೋಗದಿದ್ದರೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಗುಳಿಗೆ ಅಗ್ಗದ ನುಂಗಿ ಒಂದೇ ರಾತ್ರಿಯಲ್ಲಿ ಬಲಭೀಮನಂತೆ ಕುಸ್ತಿಗೆ ಇಳಿಯಬೇಡಿ. 

* ವೀರ್ಯಾಣು ಹಾಗೂ ಕ್ಯಾಲೋರಿ ಸಮಸ್ಯೆ: ವೀರ್ಯಾಣು ನಾಶದಿಂದ ನಿಃಶಕ್ತಿ, ಮಾನಸಿಕ ಅಸ್ಥಿರತೆ ಇದು ಅವಿವಾಹಿತ ಯುವಕರನ್ನು ಕಾಡುತ್ತದೆ. ಆದರೂ, ಅನಿಯಮಿತವಾಗಿ ಹಸ್ತಮೈಥುನ ನಿಲ್ಲದೆ ಸಾಗುತ್ತಿರುತ್ತದೆ. ಒಳಗೊಳಗೆ ಕೊರಗುತ್ತಿರುತ್ತಾರೆ. ವೀರ್ಯಾಣು ನಾಶದಿಂದ ದೈಹಿಕವಾಗಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಒಂದು ಹನಿ ವೀರ್ಯಾಣು ಉತ್ಪಾದನೆಗೆ ಒಂದಿಷ್ಟು ಪ್ರೋಟಿನ್, 40 ಹನಿ ರಕ್ತ ಸಾಕು. ಆದರೆ, ಇವಿಷ್ಟು ಒಂದೆರಡು ಬ್ರೆಡ್ ಪೀಸ್ ಸೇವನೆಯಲ್ಲೇ ಸಿಗುತ್ತದೆ. ಆದ್ದರಿಂದ ವೀರ್ಯ ನಾಶದ ಭಯಬೇಡ. ಆದರೆ, ಅನಗತ್ಯವಾಗಿ ಮನಸ್ಸು ಕಾಮಪ್ರಚೋದನೆಗೊಳ್ಳುವುದನ್ನು ನಿಯಂತ್ರಿಸುವುದು ಅಗತ್ಯ. 

ಕ್ಯಾಲೋರಿ ಸಮಸ್ಯೆ: ಇದು ಸ್ವಲ್ಪ ವಿಚಿತ್ರ ಎನಿಸಬಹುದು. ನಿಮ್ಮ ಸಂಗಾತಿ ದಪ್ಪಗಾಗಬೇಕೆ. ವೀರ್ಯ ಸೇವನೆ ಅತ್ಯುತ್ತಮ ಆಹಾರ ಏಕೆಂದರೆ ವೀರ್ಯದಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತದೆ ಎಂಬ ವಿಚಿತ್ರ ನಂಬಿಕೆ ಪುರುಷರಲ್ಲಿ ಮನೆ ಮಾಡಿದೆ. ಇದಕ್ಕೆ ಯಾವುದೇ ಆಧಾರವಿಲ್ಲ. ವೀರ್ಯದಲ್ಲಿ ವಿಟಮನ್ ಸಿ, ನೀರು, ಖನಿಖ, ಕ್ಯಾಲ್ಸಿಯಂ ಹಾಗೂ ಮೆಗ್ನೇಶಿಯಂ ಅಲ್ಲದೆ ಪ್ರೊಟೀನ್ ಇದೆಯಾದರೂ ವೀರ್ಯ ಸೇವನೆಯಿಂದ ಕ್ಯಾಲೋರಿ ಹೆಚ್ಚಳವಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಲೀಟರ್ ಗಟ್ಟಲೆ ಪುರುಷರ ವೀರ್ಯವನ್ನು ಮಹಿಳೆಯರು ಸೇವಿಸಿದರು ಸ್ಥೂಲಕಾಯರಾಗಲು ಸಾಧ್ಯವಿಲ್ಲ.

- ಅನಂಗ

Tuesday, March 8, 2011

ಹಲ್ಲುಗಳ ಆರೋಗ್ಯ ಕಾಪಾಡಲು ಆರು ಟಿಪ್ಸ್

ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ?
ಚಂದದ ನಗುವಿಗೆ ಇಲ್ಲಿದೆ ಟಿಪ್ಸ್
1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.

2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, 1/3 ಚಮಚ ಉಪ್ಪು, 4 ಚಮಚ ಗ್ಲಿಸರಿನ್ ಮತ್ತು 15 ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.

3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

4. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿಎನಿಸಬಹುದು. ಆದರೆ ರೂಢಿಯಾಗುವವರೆಗೆ, ಅಷ್ಟೆ.

5. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.

6. ಕ್ಯಾಲ್ಸಿಯಂ : ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ

ಬೇಸಿಗೆಯಲ್ಲಿ ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆ

ಬೇಸಿಗೆಯಲ್ಲಿ ತ್ವಚೆ ಸಂರಕ್ಷಣೆ ಎಲ್ಲರೂ ಅನುಭವಿಸುವ ಕಷ್ಟ. ದುಬಾರಿ ಕ್ರೀಮ್, ಲೋಶನ್, ಫೇಸ್ ಪ್ಯಾಕ್ ಬಳಸಲು ಸಾಧ್ಯವಾಗದ ಜನ ಸಾಮಾನ್ಯರಿಗೆ ಸುಲಭ ರೀತಿಯಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳಬಹುದಾದ ವಿಧಾನ ಇಲ್ಲಿದೆ. ಲಭ್ಯವಿರುವ ತರಕಾರಿ, ಹಣ್ಣುಗಳ ಸಹಾಯದಿಂದ ಮುಖದ ತ್ವಚೆಯನ್ನು ಮೃದುವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಸೈಡ್ ಎಫೆಕ್ಟ್ ಭಯವಿಲ್ಲದೆ ನೈಸರ್ಗಿಕ ವಿಧಾನ ಬಳಕೆಯಿಂದ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಒಂದಿಷ್ಟು ಸಮಯ ವ್ಯಯಿಸಿದರೆ ಸಾಕು.

ದಿನ ನಿತ್ಯ ಬಳಸುವ ತರಕಾರಿ ಹಾಗೂ ಹಣ್ಣುಗಳಾದ ಸೌತೆಕಾಯಿ, ಸೇಬು ಹಣ್ಣು, ಎಲೆಕೋಸು, ಕಿತ್ತಲೆ, ತೆಂಗಿನಕಾಯಿ, ಟೊಮಾಟೋ, ಕಲ್ಲಂಗಡಿ ಹಣ್ಣು, ಕ್ಯಾರೆಟ್, ಆಲೂಗೆಡ್ಡೆ, ದ್ರಾಕ್ಷಿ, ಪಪ್ಪಾಯ ಮುಂತಾದವುಗಳು ನೈಸರ್ಗಿಕವಾಗಿ ತ್ವಚೆ ಸಂರಕ್ಷಣೆಯ ಸಾಧನಗಳಾಗಿ ಪರಿವರ್ತನೆಗೊಳಿಸಿ ಬಳಸಬಹುದು.

ಸೌತೆಕಾಯಿ ರಸ: ಚಿಕ್ಕ ಎಳೆ ಸೌತೆಕಾಯಿ ತೆಗೆದುಕೊಂಡು ಸಿಪ್ಪೆ ತೆಗೆದು, ಚೆನ್ನಾಗಿ ಹಿಚುಕಿ ರಸ ತೆಗೆಯಿರಿ. 1/4 ಭಾಗ ರೋಸ್ ವಾಟರ್ ಹಾಗೂ ನಿಂಬೆ ರಸ ಬೆರೆಸಿ. ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಿ. ಇದರಿಂದ ಮಂಕಾದ, ಜಿಡ್ಡು ಜಿಡ್ಡಾದ ಮುಖವು ಹೊಸ ಕಾಂತಿ ಪಡೆಯುತ್ತದೆ.
ಫೇಸ್ ಪ್ಯಾಕ್ ಶುದ್ಧೀಕರಣ: 1/4 ಟೀ ಚಮಚ ನಿಂಬೆ ರಸವನ್ನು 1 ಟೀ ಚಮಚ ಹಾಲು ಹಾಗೂ ಸೌತೆ ರಸದೊಂದಿಗೆ ಸಮವಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 14 ನಿಮಿಷದ ನಂತರ ಮುಖ ಮಾರ್ಜನ ಮಾಡಬಹುದು.
ಎಲೆಕೋಸು ಮಾಸ್ಕ್: ಎಲೆಕೋಸಿನ ಕೆಲವು ಎಲೆಗಳನ್ನು ಅರೆದು ರಸ ತೆಗೆದುಕೊಳ್ಳಿ. ಅದಕ್ಕೆ 1/4 ಚಮಚ ಈಸ್ಟ್ ಬೆರೆಸಿ, 1 ಟೀ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿರಿ. ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಂಡು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಲೇಪಿಸಿರಿ. 15 ನಿಮಿಷದ ನಂತರ ನೀರಿನಲ್ಲಿ ಹತ್ತಿಯನ್ನು ಅದ್ದಿಕೊಂಡು ಮಾಸ್ಕ್ ಅನ್ನು ನಿಧಾನವಾಗಿ ಒರೆಸಿಕೊಳ್ಳಿ. ಈ ಕ್ರಮದಿಂದ ಮುಖದ ಸುಕ್ಕು, ಒಣ ತ್ವಚೆ ದೂರವಾಗಿ ಹೂವಿನಂತೆ ಅರಳುವುದು.
ಕಿತ್ತಲೆ ರಸ ಪ್ರಯೋಗ: ಕೆಲ ಬಾದಾಮಿಗಳನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ 2 ಟೀ ಚಮಚ ಹಾಲು ಮತ್ತು 1 ಟೀ ಚಮಚ ಕ್ಯಾರೆಟ್ ಹಾಗೂ ಕಿತ್ತಲೆ ರಸ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ನಂತರ ಮುಖಕ್ಕೆ ಲೇಪಿಸಿಕೊಂಡು ಸುಮಾರು ಅರ್ಧ ಗಂಟೆ ಕಾಲ ವಿಶ್ರಮಿಸಿ. ಇದರಿಂದ ಮುಖದಲ್ಲಿರುವ ಕಲೆಗಳು ದೂರವಾಗಿ, ತ್ವಚೆ ಮೃದುವಾಗಿ ಗೋಚರಿಸುತ್ತದೆ.
ಟೊಮಾಟೋ ಲೋಷನ್: 1 ಟೀ ಚಮಚ ಟೊಮಾಟೋ ರಸಕ್ಕೆ ಕೆಲ ಹನಿ ನಿಂಬೆ ರಸ ಬೆರೆಸಿ, 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಉಂಟಾದ ಸೂಕ್ಷ್ಮರಂಧ್ರಗಳು ಕೂಡಾ ಮುಚ್ಚಲ್ಪಡುತ್ತವೆ. ಮೃದುವಾದ ಆಲೂಗೆಡ್ಡೆ ತುಂಡುಗಳನ್ನು ಹೆಚ್ಚಿಕೊಂಡಿ ನೇರವಾಗಿ ಮುಖಕ್ಕೆ ಬಳಿದುಕೊಳ್ಳಬಹುದು. ಅಥವಾ ಆಲೂಗೆಡ್ಡೆ ರಸವನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ದಿನವಿಡೀ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬಹುದು.
ಕಲ್ಲಂಗಡಿ ಹಣ್ಣು : ಸಣ್ಣ ಕಲ್ಲಂಗಡಿ ಹಣ್ಣು ತೆಗೆದುಕೊಂಡು, ಬೀಜಗಳನ್ನು ಎಸೆದು ರಸ ತೆಗೆದುಕೊಳ್ಳಿ. ಕುತ್ತಿಗೆ ಹಾಗೂ ಮುಖದ ಚರ್ಮಕ್ಕೆ 15 ನಿಮಿಷ ಲೇಪಿಸಿ, ನಂತರ ಮುಖ ತೊಳೆದುಕೊಳ್ಳಿ. ಈ ಲೋಷನ್ ನಿಂದ ಮುಖದ ಕಾಂತಿ ಹೆಚ್ಚುತ್ತದೆ.
ಕ್ಯಾರೆಟ್ ಲೋಷನ್ : 1/4 ಟೀ ಚಮಚ ಕ್ಯಾರೆಟ್ ರಸಕ್ಕೆ 1 ಟೀ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಸೋಡಾ ಬೈಕಾರ್ಬೊನೇಟ್ ಬೆರೆಸಿದ ನೀರಿನಲ್ಲಿ ಹತ್ತಿಯನ್ನು ಅದ್ದಿ ಮುಖವನ್ನು ಒರೆಸಿಕೊಳ್ಳಿ. ಇದರಿಂದ ತ್ವಚೆ ಮೃದುವಾಗಿ ನಳನಳಿಸುತ್ತದೆ.
ಟೊಮಾಟೋ ರಸ : 2 ಟೀ ಚಮಚ ಟೊಮಾಟೊ ರಸಕ್ಕೆ 4 ಟೇಬಲ್ ಚಮಚ ಮಜ್ಜಿಗೆ ಬೆರೆಸಿ ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ಕಾಲ ವಿರಾಮಿಸಿ. ಇದು ಸನ್ ಬರ್ನ್ ನಿಂದ ಉಂಟಾಗುವ ಕಿರಿಕಿರಿಯನು ತಪ್ಪಿಸುತ್ತದೆ.
ಸೇಬು ಹಣ್ಣು ಟಾನಿಕ್: 1 ಟೇಬಲ್ ಚಮಚ ಸೇಬು ಹಣ್ಣಿನ ರಸಕ್ಕೆ 1/4 ಟೀ ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮುಖ ಹೊಳೆಯುತ್ತದೆ.
ಇದೇ ಕ್ರಮದಲ್ಲಿ ದ್ರಾಕ್ಷಿ ರಸವನ್ನು 15 ನಿಮಿಷಗಳ ಕಾಲ ಹಚ್ಚಿಕೊಳ್ಳುವುದರಿಂದ ತ್ವಚೆ ಮೃದುವಾಗುತ್ತದೆ. 1 ಟೇಬಲ್ ಚಮಚ ಪಪ್ಪಾಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರಾಗುತ್ತವೆ. ತೆಂಗಿನ ಕಾಯಿ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನೂ ಅನೇಕ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಸ್ತನ ಕ್ಯಾನ್ಸರ್ ಬಗ್ಗೆ ಸ್ತೀಯರಿಗೆ ಕಿವಿಮಾತು
ಸ್ತನ ಕ್ಯಾನ್ಸರ್ ! ಪ್ರತಿಯೊಬ್ಬ ಮಹಿಳೆಯನ್ನೂ ಬೆಚ್ಚಿ ಬೀಳಿಸುವ ಶಬ್ದ. ವಯಸ್ಸೋ, ವಂಶವಾಹಿನಿಯೋ, ಹಾರ್ಮೋನ್ ಬದಲಾವಣೆಗಳೋ, ಯಾವುದೋ ಒಂದು ಕಾರಣದಿಂದ ಎದೆಗಪ್ಪಳಿಸುವ ಈ ಕಾಯಿಲೆ ಬಗ್ಗೆ ಅನೇಕರಿಗೆ ಭಯ ಹೆಚ್ಚು ಆದರೆ, ತಿಳವಳಿಕೆ ಕಡಿಮೆ. ಸ್ತನಗಳ ಆರೋಗ್ಯ, ಮುಖ್ಯವಾಗಿ ಇಡೀ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಎಷ್ಟು ಮುನ್ನೆಚ್ಚರಿಕೆವಹಿಸಿದರೂ ಕಡಿಮೆಯೇ. ಪ್ರತಿಯೊಬ್ಬ ಮಹಿಳೆಯೂ ಈ ಕಾಯಿಲೆ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಕ್ಯಾನ್ಸರ್ ಹತ್ತಿರ ಸುಳಿಯದಂತೆ ಕಾಳಜಿವಹಿಸಬೇಕೆನ್ನುವ ಕಳಕಳಿ ದಟ್ಸ್ ಕನ್ನಡದ್ದು.

ಈ ಕ್ಯಾನ್ಸರಿನ ಬಹುತೇಕ ಪ್ರಕರಣಗಳಲ್ಲಿ ಮುನ್ನೆಚ್ಚರಿಕೆಗಿಂತ ಕಾಯಿಲೆ ಉಲ್ಬಣವಾದ ನಂತರವಷ್ಟೇ ಮಹಿಳೆಯರು ಚಿಕಿತ್ಸೆಯನ್ನು ಅರಸಿಕೊಂಡು ಹೋಗುವುದು ವ್ಯಕ್ತವಾಗಿರುವ ಅಂಶ. ಕಾಯಿಲೆ ಬಗ್ಗೆ ಬಹಳಷ್ಟು ಜನರಿಗೆ ಅರಿವು , ಮಾಹಿತಿ ಇಲ್ಲದಿರುವುದೇ ಉಲ್ಬಣಗೊಳ್ಳುವುದಕ್ಕೆ ಕಾರಣ. ಇಂಥ ಮಾನಿನಿಯರಿಗೆ ಮಾಹಿತಿ ಒದಗಿಸುವ ಮತ್ತು ತನ್ಮೂಲಕ ಜಾಗೃತಿ ಉಂಟುಮಾಡುವದಕ್ಕಾಗಿ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಎಂದು ಕರೆಯಲಾಗುತ್ತದೆ. ಇವತ್ತಿನಿಂದಲೇ ಆರಂಭಗೊಳ್ಳುವ ಜಾಗೃತಿ ಸದಾ ನಿಮ್ಮ ಸಂಗಾತಿಯಾಗಿರಲಿ ಎಂಬ ಆಶಯ ನಮ್ಮದು.
ಮೊದಲಿಗೆ ಸ್ತನ ಕ್ಯಾನ್ಸರ್ ಬಗ್ಗೆ ಪ್ರಮುಖ ಮೂರು ಸಂಗತಿಗಳನ್ನು ಗಮನಿಸೋಣ.
ಅ) 1985 ರಲ್ಲಿ ಭಾರತದಲ್ಲಿನ ಆಸ್ಟ್ರಾ ಜೆನಿಕಾ ಎಂಬ ಔಷಧಿ ಉತ್ಪಾದನಾ ಸಂಸ್ಥೆಯಿಂದ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಆರಂಭವಾಯಿತು. Arimidex ಹಾಗೂ Tamoxifen ಮುಂತಾದ ಔಷಧಿಗಳನ್ನು ಆಸ್ಟ್ರಾ ಜೆನಿಕಾ ಉತ್ಪಾದಿಸುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ mammography ಚಿಕಿತ್ಸಾ ವಿಧಾನಕ್ಕೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶವನ್ನು ಆಸ್ಟ್ರಾ ಜೆನಿಕಾ ಹೊಂದಿದೆ.
ಆ) 1993ರಲ್ಲಿ ಸ್ತನ ಕ್ಯಾನ್ಸರ್ ಸಂಶೋಧನಾ ಕೇಂದ್ರ ಆರಂಭಿಸಿದ ಎವೆಲಿನ್ ಲೌಡರ್, ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಅನ್ನು ಪರಿಚಯಿಸಿದರು. ಅಂದಿನಿಂದ 'ಪಿಂಕ್ ರಿಬ್ಬನ್' ಸ್ತನ ಕ್ಯಾನ್ಸರಿನ ಅಧಿಕೃತ ಚಿನ್ಹೆಯಾಗಿ ಜನಪ್ರಿಯಗೊಂಡಿತು.
ಇ) ಸ್ತನ ಕೋಶಗಳಿಗೆ ಕ್ಯಾನ್ಸರ್ ತಗುಲಲು ಡಿಎನ್ ಎಯಲ್ಲಿ ಬದಲಾವಣೆ ಕಾರಣ ಇರಬಹುದು ಎಂದು ಹಲವಾರು ವರ್ಷಗಳ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಕೆಲವಾರು ವಂಶವಾಹಿ(ಜೀನ್) ಗಳಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.
ಸ್ತನ ಕ್ಯಾನ್ಸರ್ ಯಾಕೆ ಬರುತ್ತದೆ? ಅದಕ್ಕೇನು ಕಾರಣ?
* ವಯಸ್ಸು: ವಯಸ್ಸು ಹೆಚ್ಚಾದಂತೆಲ್ಲ ಸೋಂಕು ತಗುಲುವ ಸಾಧ್ಯತೆ/ಅಪಾಯ ಹೆಚ್ಚು. 40 ರಿಂದ 60ರ ವಯೋಮಾನದ ಸುಮಾರು ಶೇ.16 ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತೊಂದರೆ ಇರುವುದು ಕಂಡು ಬಂದಿದೆ.
* ವಂಶಪರಂಪರೆ: ಈ ಮುಂಚೆ ನಿಮ್ಮ ಹಿಂದಿನ ತಲೆಮಾರಿನವರಿಗೆ ಅಂದರೆ ನಿಮ್ಮ ಅಜ್ಜಿ, ಅಮ್ಮ ಯಾರಿಗಾದರೂ ಈ ಕಾಯಿಲೆ ಬಂದಿದ್ದರೆ, ನಿಮಗೂ ಈ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ. BR CA1 ಎಂಬ ಜೀನ್ ಅನ್ನು ಗುರುತಿಸಲಾಗಿದ್ದು, ಈ ಜೀನ್ ನಿಮ್ಮಲ್ಲಿದ್ದರೆ, ಕಾಯಿಲೆ ಬರುವ ಸಂಭವ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
* ಹಾರ್ಮೋನ್ ಬದಲಾವಣೆ: ಹುಡುಗಿಯರು ಋತಿಮತಿಯಾದಾಗ ಹಾಗೂ ಗರ್ಭಿಣಿಯಾದಾಗ ಅವರ ದೇಹದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳಾಗುತ್ತದೆ. 12 ವರ್ಷ ವಯೋಮಿತಿಯಲ್ಲಿ ಋತುಚಕ್ರಕ್ಕೆ ಕಾಲಿರಿಸಿದ ಹುಡುಗಿಯರಿಗೆ, 55 ವರ್ಷದ ನಂತರ ಮುಟ್ಟು ನಿಂತ ಮಹಿಳೆ ಹಾಗೂ ಇಳಿ ವಯಸ್ಸಿನಲ್ಲಿ ಗರ್ಭದಾರಣೆ ಮಾಡುವ ಸ್ತ್ರೀಯರಿಗೆ ಈ ಕಾಯಿಲೆಯ ಅಪಾಯ ಎದುರಾಗುವ ಸಂಭವವಿರುತ್ತದೆ.
* ಎದೆಹಾಲು: ಮಕ್ಕಳಿಗೆ ಎದೆಹಾಲು ನೀಡದಿರುವ ಮಹಿಳೆಯರಿಗೆ ಅಪಾಯ ಕಾದಿದೆ. ಈ ಬಗ್ಗೆ ಸಂಶೋಧಕರು ಖಚಿತವಾಗಿ ಸ್ಪಷ್ಟಪಡಿಸಿಲ್ಲವಾದರೂ ಮಗುನಿಗೆ ಮೊಲೆಯೂಡುವುದರಿಂದ ಕ್ಯಾನ್ಸರ್ ದೂರಾಗಿಸಬಹುದು ಎಂದು ಹೇಳಲಾಗುತ್ತದೆ.
ಇನ್ನು ಧೂಮಪಾನ, ಮದ್ಯ ಸೇವನೆ, ಮಾದಕ ದ್ರವ್ಯ ಚಟ ಮುಂತಾದವುಗಳಿಗೆ ದಾಸರಾದ ಮಹಿಳೆಯರಿಗೆ ಸಹಜವಾಗಿ ಕ್ಯಾನ್ಸರ್ ರೋಗ ಅಮರಿಕೊಳ್ಳುತ್ತದೆ. ಅತಿಯಾದರೆ ಎಲ್ಲವೂ ಅಪಾಯ ಎಂಬ ವೈದ್ಯರ ನೀತಿವಾಕ್ಯ ಸ್ತನ ಕ್ಯಾನ್ಸರಿಗೂ ಸಲ್ಲುತ್ತದೆ